ಸಿನಿ ಪ್ರತಿನಿಧಿ ವರದಿ
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಅಂದ್ರೆ, ಕೋಟಿ ವೆಚ್ಚದಲ್ಲಿ ಮದುವೆ ‘ಆಹ್ವಾನ ಪತ್ರಿಕೆ’ಯನ್ನ ತಯಾರಿಸುವುದು ಇಂದಿನ ಫ್ಯಾಶನ್ ಆಗಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆ ಆಮಂತ್ರಣ ಪತ್ರಿಕೆ ಜನಸಾಮಾನ್ಯರಂತೆ ತುಂಬಾ ಸಿಂಪಲ್ ಆಗಿ ಮಾಡಿಸಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆಯ ಆಹ್ವಾನ ಪತ್ರಿಕೆ ಅತ್ಯಂತ ಸರಳವಾಗಿದೆ. ಕೆಂಪು ಮತ್ತು ಬಿಳಿ ಬಣ್ಣದ ವಿನ್ಯಾಸವನ್ನ ಹೊಂದಿದೆ. ಯಶ್ ಹಾಗೂ ರಾಧಿಕಾ ವಿವಾಹ ಮಹೋತ್ಸವ, ಬೆಂಗಳೂರಿನ ಅರಮನೆ ಮೈದಾನದ ‘ತ್ರಿಪುರ ವಾಸಿನಿ’ ಕಲ್ಯಾಣ ಮಂಟಪದಲ್ಲಿ ನೆರವೇರಲಿದೆ.
ಕುಟುಂಬಸ್ಥರು ಮಾಡಿರುವ ಆಮಂತ್ರಣ ಪತ್ರದ ಜತೆಗೆ ಯಶ್-ರಾಧಿಕಾ ತಮ್ಮ ಪರಮಾಪ್ತರಿಗಾಗಿ ವಿಶೇಷವಾಗಿ ಮುದ್ದಾದ ಕವನ-ಆಮಂತ್ರಣ ಸಿದ್ಧಪಡಿಸಿದ್ದಾರೆ. ಇದನ್ನು ನಿರ್ದೇಶಕ ಎಪಿ ಅರ್ಜುನ್ ಬರೆದಿದ್ದಾರೆ.
ಕವನವೇನು?
ನಮಸ್ತೆ, ”ಇಲ್ಲಿ ಎಲ್ಲರೂ ಸಂಬಂಧಿಕರೇ…ಇಲ್ಲಿ ಎಲ್ಲವೂ ಅನುಬಂಧವೇ….ಸಹನೆ ಮರವನು ತಬ್ಬಿದ ಜೀವಲತೆಯಲಿ. ನಲುಮೆ ಹೂ ಅರಳಿದೆ….! ಹಸನ ಬಾಳ ನಂದನವನಕಿಂದು ನಿತ್ಯನೂತನ ಚಿರವಸಂತ ಬಂದಿದೆ…! ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತಾ ನಿಮ್ಮದೇ….ತಾಳಿ ಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೇ?!!.
”ಸಂಬಂಧಕ್ಕಿಂತ ಕುಟುಂಕ್ಕಿಂತ ದೊಡ್ಡದು ಯಾವುದೂ ಇಲ್ಲ. ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರಾವ ಹೆಮ್ಮೆ ಬೇಕಿಲ್ಲ. ನಿಮ್ಮ ಪ್ರೀತ್ಯಾದರಗಳಿಗಿಂತ ಮಿಗಿಲಾದದ್ದು ಬೇರಾವುದು ಇಲ್ಲ. ಇಲ್ಲಿ ಬರೆದುದಕ್ಕಿಂತ ಬರೆಯದ ಪದಗಳೇ ಜಾಸ್ತಿ..! ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಪೂರ್ತಿ….! ದಯಮಾಡಿ ಸಕಲರೂ ನಮ್ಮ ಮದುವೆಗೆ ತಪ್ಪದೇ ಬನ್ನಿ ನಮ್ಮನ್ನ ಹರಿಸಿ ಅಷ್ಟೇ.”-ಯಶ್ ರಾಧಿಕಾ ಪಂಡಿತ್
ಅಲ್ಲದೆ ‘ಆಹ್ವಾನ ಪತ್ರಿಕೆ’ ಕೊನೆಯಲ್ಲಿ, ಇಬ್ಬರು ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಿದ್ದು ವಿಶೇಷವಾಗಿದೆ.